Tuesday, July 24, 2012

ಉಪೇಂದ್ರ ಗಾಡ್ ಫಾದರ್ ಒಪ್ಪಿಕೊಂಡ ಗುಟ್ಟು ರಟ್ಟು

ವರಮಹಾಲಕ್ಷ್ಮಿ ಹಬ್ಬದಂದು (ಜುಲೈ 27, 2012) ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಗಾಡ್‌‌ಫಾದರ್' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಜಿತ್ ನಟನೆಯ ತಮಿಳಿನ 'ವರಲಾರು' ರೀಮೇಕ್ ಈ ಚಿತ್ರದಲ್ಲಿ ಉಪೇಂದ್ರ ಮೂರು ಪಾತ್ರಗಳಲ್ಲಿ ನಟಿಸಿದ್ದಾರೆ. ಅಪ್ಪ, ಇಬ್ಬರು ಮಕ್ಕಳ ತ್ರಿಪಾತ್ರ ಉಪ್ಪಿಯದು.

ರಿಯಲ್ ಸ್ಟಾರ್ ಉಪೇಂದ್ರ 'ಆರಕ್ಷಕ' ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರು. ಈಗ ತ್ರಿಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಮೂರು ಪಾತ್ರಗಳು ಅತಿಂಥವಲ್ಲ. ಪರಮ ಕ್ರೂರಿಗಳಾಗಿರುವ ಪಾತ್ರಗಳವು. ಅಂತಹ ಪಾತ್ರಗಳಲ್ಲಿ ಇದುವರೆಗೆ ಉಪ್ಪಿ ನಟಿಸಿಯೇ ಇಲ್ಲ. ಇಷ್ಟೇ ಅಲ್ಲ, ಈ ಚಿತ್ರದಲ್ಲಿ ನಟಿಸುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ.

ಗಾಡ್ ಫಾದರ್ ಪಕ್ಕಾ ಥ್ರಿಲ್ಲರ್ ಚಿತ್ರ. ಈ ಚಿತ್ರದಲ್ಲಿ ನಾಯಕಿಯಾಗಿ ಜಯಮಾಲಾ ಪುತ್ರಿ ಸೌಂದರ್ಯಾ ನಟಿಸಿದ್ದಾರೆ. ಸದಾ, ಭೂಮಿಕಾ ಚಾವ್ಲಾ, ಕ್ಯಾಥರಿನ್ ಥ್ರೆಸಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಾಡ್ ಫಾದರ್ ನಿರ್ದೇಶಕರು ತಮಿಳಿನ ಖ್ಯಾತ ಛಾಯಾಗ್ರಾಹಕ ಪಿ ಸಿ ಶ್ರೀರಾಮ್. ನಿರ್ಮಾಪಕರು ಗಂಡಗಲಿ ಕೆ ಮಂಜು.

ತಮಿಳಿನ 'ವರಲಾರು' ಚಿತ್ರ ಆ ಕಾಲದಲ್ಲಿ ಭಾರೀ ಪ್ರಶಂಸೆ ಪಡೆದುಕೊಂಡಿತ್ತು. ಮೂರು ಪಾತ್ರಗಳಲ್ಲಿ ಅಜಿತ್ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರಲ್ಲೂ ಹೆಣ್ಣಿನಂತೆ, ಹೆಣ್ಣಿಗನಂತೆ ಕಾಣಿಸಿಕೊಂಡು ಭಾರೀ ಸಂಚಲನ ಸೃಷ್ಟಿಸಿದ್ದರು ಅಜಿತ್. ಅದೇ ಪಾತ್ರವನ್ನು ಇಲ್ಲಿ ಉಪ್ಪಿ ಮಾಡಿದ್ದಾರೆ. ಬಹಳಷ್ಟು ನಾಯಕರು ನಿರಾಕರಿಸಿದ ಪಾತ್ರವನ್ನು ಉಪೇಂದ್ರ ಒಪ್ಪಿ ಮಾಡಿದ್ದಾರೆ.

ಆಶ್ಚರ್ಯವೆಂದರೆ ಉಪೇಂದ್ರ ಈ ಚಿತ್ರವನ್ನು ಒಪ್ಪಿದ್ದು ಕೇವಲ ನಿರ್ಮಾಪಕ ಕೆ. ಮಂಜು ಅವರ ಸ್ನೇಹಕ್ಕೆ ಬೆಲೆ ಕೊಡುವ ದೃಷ್ಟಿಯಿಂದ ಎಂಬುದು ಗಮನಾರ್ಹ ಸಂಗತಿ. ಈ ವಿಷಯವನ್ನು ಸ್ವತಃ ಉಪೇಂದ್ರ ಬಾಯ್ಬಿಟ್ಟಿದ್ದಾರೆ. ಈ ಚಿತ್ರದ ತೆಲುಗು ರಿಮೇಕ್‌ ನಲ್ಲಿ ಉಪ್ಪಿ ನಟಿಸಬೇಕು ಎಂಬ ಆಫರ್ ಕೆಲವು ವರ್ಷಗಳ ಹಿಂದೆಯೇ ಬಂದಿತ್ತು.

ಅದನ್ನು ಉಪ್ಪಿ ನಯವಾಗಿ ತಿರಸ್ಕರಿಸಿದ್ದರು ಕೂಡ. ಆದರೆ ಮಂಜು ಅವರ ಆಫರ್ ತಿರಸ್ಕರಿಸಲು ಉಪ್ಪಿಗೆ ಸಾಧ್ಯವಾಗದ ಕಾರಣ ಒಪ್ಪಿಕೊಂಡಿದ್ದಾರಂತೆ. "ಅಜಿತ್ ಸರಿಸಮಕ್ಕೆ ಪ್ರಯತ್ನಿಸದೇ ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ನಟಿಸಿದ್ದೇನೆ" ಎಂದಿದ್ದಾರೆ ಉಪೇಂದ್ರ. ಈ ಮೂಲಕ ಉಪೇಂದ್ರ ಅಭಿಮಾನಿಗಳಿಗೆ ಒಂದೇ ಚಿತ್ರದಲ್ಲಿ ಅವರ ಮೆಚ್ಚಿನ ನಟನ ಮೂರು ಪಾತ್ರ ನೋಡುವ ಅವಕಾಶ ಲಭ್ಯ.

ಅಂದಹಾಗೆ, ಈ 'ಗಾಡ್‌ಫಾದರ್ ಚಿತ್ರ ಮೇ ತಿಂಗಳ ಮೊದಲ ವಾರದಲ್ಲೇ ಬಿಡುಗಡೆ ಆಗಬೇಕಿತ್ತು. ಆಗ ಚಿತ್ರದ ಬಿಡುಗಡೆಗೆ ಅಡ್ಡ ಬಂದದ್ದು ಮುನಿರತ್ನ ನಿರ್ಮಾಣದ 'ಕಠಾರಿ ವೀರ ಸುರಸುಂದರಾಂಗಿ'. ಗಾಡ್ ಫಾದರ್ ಹಾಗೂ ಕಠಾರಿವೀರ ಬಿಡುಗಡೆ ಸಂಬಂಧ ಮೊದಲು ಭಾರೀ ಸ್ನೇಹಿತರಾಗಿದ್ದ ಮಂಜು ಹಾಗೂ ಮುನಿರತ್ನ, ಪರಸ್ಪರ ಬೀದಿಜಗಳದಂತೆ ಮಾಧ್ಯಮದ ಮುಂದೆಯೂ ಕಚ್ಚಾಡಿದ್ದರು. ನಂತರ ಕಠಾರಿವೀರ ಬಿಡುಗಡೆಗೊಂಡಿದ್ದು ಈಗ ಇತಿಹಾಸ.

ಗಾಡ್‌ಫಾದರ್ ಚಿತ್ರಕ್ಕೆ ಪ್ರಮುಖ ಆಕರ್ಷಣೆಯೆಂದರೆ ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಸಂಗೀತ. ಈ ಚಿತ್ರದ ಏಳು ಹಾಡುಗಳ ಪೈಕಿ ಮೂರು ಹಾಡುಗಳಿಗೆ ಹೊಸದಾಗಿ ರೆಹಮಾನ್ ಅವರೇ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಗಮನ ಸೆಳೆದಿವೆ. ಶಾಸ್ತ್ರೀಯ ಸಂಗೀತ ಆಧಾರಿತ ಹಾಡುಗಳು ಹಿಂದಿನ ಮಾಧುರ್ಯವನ್ನು ನೆನಪಿಸುವಂತಿವೆ.

ಗಾಡ್‌ಫಾದರ್ ಚಿತ್ರದ ವಿತರಣೆ ಹಕ್ಕುಗಳು ಈಗಾಗಲೇ ಸಮರ್ಥ್ ವೆಂಚರ್ಸ್‌ ಪ್ರಸಾದ್ ಪಾಲಾಗಿವೆ. ಹೀಗಾಗಿ ಚಿತ್ರ ಗಳಿಕೆಯಲ್ಲೂ ಸೋತರೂ ನಿರ್ಮಾಪಕ ಮಂಜು ಸಂಪೂರ್ಣ ಸೇಫ್. ಈಗ ತಾವು ವಿತರಿಸಲಿರುವ ಗಾಡ್‌ಫಾದರ್, ಗೆಲ್ಲಲೇಬೇಕು ಎಂದು ಹಠ ಹಿಡಿದು ಕಾರ್ಯಪ್ರವೃತ್ತರಾಗಿರುವ ಪ್ರಸಾದ್, ಆಡಿಯೋ ಸೀಡಿಗಳನ್ನು ಉಚಿತವಾಗಿ ಹಂಚಲು ನಿರ್ಧರಿಸಿದ್ದಾರೆ.ಚಿತ್ರ ಬಿಡುಗಡೆಯಾದ ಮೊದಲ ಮೂರು ದಿನಗಳ ಕಾಲ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಹಾಡುಗಳ ಧ್ವನಿಸುರುಳಿಗಳನ್ನು ಎಲ್ಲಾ ಪ್ರೇಕ್ಷಕರಿಗೂ ನೀಡಲಾಗುತ್ತದೆ" ಎಂದಿದ್ದಾರೆ ಸಮರ್ಥ್ ವೆಂಚರ್ಸ್ ಪ್ರಸಾದ್. ಅದೆಷ್ಟು ನಿಜ ಎಂಬುದು ಚಿತ್ರ ಬಿಡುಗಡೆ ಬಳಿಕವಷ್ಟೇ ತಿಳಿಯಲಿದೆ. ಸುದ್ದಿ ಮೂಲಗಳ ಪ್ರಕಾರ ಸಿಡಿ ಉಚಿತ. ಆದರ ಟಿಕೆಟ್ ದರವನ್ನು ಹತ್ತು ರೂಪಾಯಿ ಹೆಚ್ಚಿಸಲಾಗುತ್ತದೆ.

No comments:

Post a Comment