Friday, May 18, 2012

ಯಾರಿಗ್ಹೇಳೋಣ ಮುನಿರತ್ನ 'ಕಠಾರಿವೀರ' ಪ್ರಾಬ್ಲಂ


'ಕಠಾರಿವೀರ ಸುರಸುಂದರಾಂಗಿ' ಚಿತ್ರದ ನಿರ್ಮಾಪಕ ಮುನಿತನ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಾಗಿದೆ. ಚಿತ್ರದಲ್ಲಿ ಹಿಂದೂ ದೇವಾನುದೇವತೆಗಳನ್ನು ಅಪಮಾನ ಮಾಡಲಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಚಿತ್ರದ ವಿರುದ್ಧ ತೀವ್ರ ಆಕ್ಷೇಪವ್ಯಕ್ತಪಡಿಸಿದ್ದವು. ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಆಗ್ರಹಿಸಿದ್ದವು.

ಆದರೆ ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಯೊಂದು ಗುರುವಾರ ನಡೆಯಿತು. ಚಿತ್ರಕ್ಕೆ ಯಾವುದೇ ಕತ್ತರಿ ಪ್ರಯೋಗ ಮಾಡಬಾರದು. ಯಥಾವತ್ತಾಗಿ ಪ್ರದರ್ಶಿಸಲು ಅವಕಾಶ ಮಾಡಿಕೊಡಬೇಕು ಎಂದು ದಲಿತ ರಕ್ಷಣಾ ವೇದಿಕೆ ಸಿವಿಲ್ ಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ಕೋರ್ಟ್ ತೀರ್ಪು ನೀಡಿದ್ದು, ಚಿತ್ರದಲ್ಲಿನ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ ಸೆನ್ಸಾರ್ ಅನುಮೋದನೆಗೆ ಅನುಗುಣವಾಗಿ ಚಿತ್ರವನ್ನು ಪ್ರದರ್ಶಿಸಬೇಕು ಎಂದು ಆದೇಶಿಸಿದೆ.

ಒಂದು ಕಡೆ ಕೋರ್ಟ್ ಆದೇಶ ಮತ್ತೊಂದು ಕಡೆ ಹಿಂದೂ ಪರ ಸಂಘಟನೆಗಳ ಒತ್ತಡ. ಕೋರ್ಟ್ ಆಜ್ಞೆಗೆ ತಲೆಬಾಗಬೇಕೆ? ಅಥವಾ ಸ್ವಾಮೀಜಿಗಳ ಒತ್ತಡಕ್ಕೆ ಮಣಿಯಬೇಕೆ? ಮುನಿರತ್ನ ಪ್ರಾಬ್ಲಂ ಯಾರಿಗ್ಹೇಳೋಣ ಎಂಬಂತಾಗಿದೆ. ಇನ್ನೊಂದು ಕಡೆ ಕೋರ್ಟ್ ಆದೇಶ ಮುನಿರತ್ನ ಪರವಾಗಿರುವುದು ಅವರು ಒಳಗೊಳಗೆ ಖುಷಿಪಡುವಂತೆಯೂ ಮಾಡಿದೆ.

ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯುವಂತೆ ಸೆನ್ಸಾರ್ ಮಂಡಳಿಗೆ ಮತ್ತೆ ಮನವಿ ಸಲ್ಲಿಸುವಂತೆ ನಿರ್ಮಾಪಕರಿಗೆ ಸ್ವಾಮೀಜಿಗಳು ಸೂಚಿಸಿದ್ದಾರೆ. ಆದರೆ ಇದೊಂದು ಸುದೀರ್ಘ ಪ್ರಕ್ರಿಯೆ. ಸೆನ್ಸಾರ್‌ಗೆ ಮತ್ತೆ ಮನವಿ ಸಲ್ಲಿಸುವುದು ದೀರ್ಘ ಪ್ರಕ್ರಿಯೆಯಾಗುತ್ತದೆ. ಅಲ್ಲಿಯವರೆಗೂ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಚಿತ್ರದ ವಿತರಕ ರಾಕ್‌ಲೈನ್ ವೆಂಕಟೇಶ್ ಭರವಸೆ ನೀಡಿದ್ದಾರೆ. ಮುಂದೇನಾಗುತ್ತದೋ ಗೊತ್ತಿಲ್ಲ, ನಿರೀಕ್ಷಿಸಿ.

No comments:

Post a Comment