Monday, April 29, 2013

ಎಸ್ ನಾರಾಯಣ್ ಆಕ್ಷನ್ ಕಟ್ ನಲ್ಲಿ ಉಪೇಂದ್ರ

'ಛತ್ರಿಗಳು ಸಾರ್ ಛತ್ರಿಗಳು' ಚಿತ್ರದ ಬಳಿಕ ಕಲಾ ಸಾಮ್ರಾಟ್ ಎಸ್ ನಾರಾಯಣ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಪ್ರದರ್ಶನ ಕಾಣುತ್ತಿರುವ 'ಛತ್ರಿಗಳು' ಚಿತ್ರಕ್ಕೆ ಪ್ರೇಕ್ಷಕರು ಅಷ್ಟಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂಬ ಸುದ್ದಿಯೂ ಇದೆ. ಇನ್ನೊಂದು ಕಡೆ ಉಪೇಂದ್ರ ಅಭಿನಯದ 'ಟೋಪಿವಾಲ' ಚಿತ್ರವೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಈಗ ಇಬ್ಬರೂ ಮತ್ತೊಂದು ಪ್ರಯೋಗಕ್ಕೆ ಸಿದ್ಧವಾಗುತ್ತಿದ್ದಾರೆ. ಅಂದಹಾಗೆ ನಾರಾಯಣ್ ಜೊತೆಗಿನ ಉಪೇಂದ್ರ ಚಿತ್ರಕ್ಕೆ 'ಬೃಹಸ್ಪತಿ' ಎಂದು ಹೆಸರಿಡಲಾಗಿದೆ.
ಇನ್ನೊಂದು ಕಡೆ ಉಪೇಂದ್ರ ಹೋಂ ಬ್ಯಾನರ್ ಚಿತ್ರಕ್ಕೆ ಇನ್ನೂ ಶುಭಮುಹೂರ್ತ ಕೂಡಿಬಂದಿಲ್ಲ. ಮತ್ತೊಂದು ಕಡೆ ಆರ್ ಚಂದ್ರು ನಿರ್ದೇಶನದ ಚಿತ್ರ 'ಬ್ರಹ್ಮ' ಸೆಟ್ಟೇರಲು ಸಿದ್ಧವಾಗಿದೆ. ಬ್ರಹ್ಮ ಹಾಗೂ ಬೃಹಸ್ಪತಿ ಎರಡೂ ಚಿತ್ರಗಳ ಸಬ್ಜೆಕ್ಟ್ ಥ್ರಿಲ್ಲಿಂಗ್ ಎಂಬುದು ವಿಶೇಷ. 'ಬೃಹಸ್ಪತಿ' ಸೆಟ್ಟೇರಬೇಕಾದರೆ 'ಬ್ರಹ್ಮ' ಮುಗಿಯಬೇಕು. ಆ ಬಳಿಕವಷ್ಟೇ 'ಬೃಹಸ್ಪತಿ' ಹಣೆಬರಹ ನಿರ್ಧಾರವಾಗಲಿದೆ. ಸದ್ಯಕ್ಕೆ ಎಸ್ ನಾರಾಯಣ್ ಅವರು ಚಿತ್ರಕಥೆ ಹೆಣೆಯುವುದರಲ್ಲಿ ಬಿಜಿಯಾಗಿದ್ದಾರೆ. 'ಬೃಹಸ್ಪತಿ' ಚಿತ್ರದ ತಾಂತ್ರಿಕ ಹಾಗೂ ಪಾತ್ರವರ್ಗದ ವಿವರಗಳು ಇನ್ನಷ್ಟೇ ಹೊರಬೀಳಬೇಕು. 

No comments:

Post a Comment