Thursday, March 14, 2013

ಉಪೇಂದ್ರ 'ಟೋಪಿವಾಲ' ಕಥೆ ಏನು? ಪ್ರೀವ್ಯೂ

ಚಿತ್ರಕ್ಕೆ ಪ್ರಚಾರ ಕೊಡುವುದರಲ್ಲಿ, ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ, ಅಭಿಮಾನಿಗಳ ಊಹೆಗೆ ನಿಲುಕದಂತೆ ಚಿತ್ರವನ್ನು ತೆಗೆಯುವುದರಲ್ಲಿ ಉಪೇಂದ್ರ ಅವರಿಗೆ ಅವರೇ ಸಾಟಿ. ಇದೇ ಶುಕ್ರವಾರ (ಮಾ.15)ಅವರು 'ಟೋಪಿವಾಲ' ಗೆಟಪ್ ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇಷ್ಟಕ್ಕೂ ಚಿತ್ರದಲ್ಲಿ ಏನಿದೆ? ಏನಿಲ್ಲ? ಕಥೆ ಏನು? ಎಂಬ ಬಗ್ಗೆ ಉಪೇಂದ್ರ ಒಂದೇ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಹೋಗಲಿ ಚಿತ್ರದ ಟ್ರೇಲರ್ ಗಳಲ್ಲಾದರೂ ಏನಾದರೂ ಸುಳಿವು ಸಿಗುತ್ತಾ ಎಂದರೆ ಟ್ರೇಲರ್ ಗಳನ್ನೇ ಬಿಡುಗಡೆ ಮಾಡಿಲ್ಲ. ಯಾಕೆ ಉಪ್ಪಿ ಹೀಗೆ ಮಾಡಿದ್ರಿ ಎಂದರೆ, ಎಲ್ಲರೂ ಮಾಡುವುದನ್ನೇ ನಾವು ಮಾಡಿದರೆ ಏನು ಪ್ರಯೋಜನ. ನಾವು ಒಂಚೂರು ಡಿಫರೆಂಟ್ ಎನ್ನುತ್ತಾರೆ ರಿಯಲ್ ಸ್ಟಾರ್. ಇನ್ನು ಥಿಯೇಟರ್ ಗಳ ಮುಂದೆ ಪೋಸ್ಟರ್ ಗಳನ್ನೂ ವಿಭಿನ್ನವಾಗಿ ಪ್ರದರ್ಶಿಸಲಾಗಿದೆ. ತಲೆಕೆಳಗಾಗಿ ಪ್ರದರ್ಶಿಸಿದ್ದಾರೆ. ಇಲ್ಲೂ ವಿಭಿನ್ನ. ಅಂದ್ರೆ ಈ ಚಿತ್ರ ಅವರೇ ಹೇಳುವಂತೆ 'ತಲೆ ಇಲ್ಲದವರಿಗಲ್ಲ'.

ಇಷ್ಟಕ್ಕೂ ಚಿತ್ರದ ಕಥೆ ಏನು? ಚಿತ್ರದ ಪ್ರಚಾರ ಪ್ರೇಕ್ಷಕರನ್ನು ಸೆಳೆಯುವ ಮತ್ತೊಂದು ತಂತ್ರ ಇದು. ಇಷ್ಟಕ್ಕೂ ಚಿತ್ರದ ಕಥೆ ಏನು? ಎಂದರೆ ಸ್ವಲ್ಪ ಸುಳಿವು ಸಿಕ್ಕಿದೆ. ಅದೇನೆಂದರೆ ಪ್ರಚಲಿತ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಹೂರಣ. ಉಪ್ಪಿ ಸಹ ಮುಂಬರುವ ದಿನಗಳಲ್ಲಿ ರಾಜಕೀಯ ರಂಗಕ್ಕೆ ಎಂಟ್ರಿ ಕೊಡಲಿರುವ ಹಿನ್ನೆಲೆಯಲ್ಲಿ ಚಿತ್ರ ಕುತೂಹಲ ಕೆರಳಿಸಿದೆ.
 
ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ? ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸೇರಿದಂತೆ ರಾಜ್ಯದಾದ್ಯಂತ ಟೋಪಿವಾಲ ಚಿತ್ರ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆರ್.ಎಸ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಶ್ರೀನಿವಾಸ್ ಹಾಗೂ ಕೆ.ಪಿ.ಶ್ರೀಕಾಂತ್.
 
ಚಿತ್ರದ ತಾಂತ್ರಿಕ ಬಳಗದಲ್ಲಿ ಯಾರಿದ್ದಾರೆ? ಶ್ರೀನಿ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಸಿನಿಮಾಗೆ ಕಥೆ, ಚಿತ್ರಕಥೆಯನ್ನು ಉಪೇಂದ್ರ ಅವರೇ ಬರೆದಿದ್ದಾರೆ. ಶ್ರೀಷ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶ್ರೀ ಸಂಕಲನ, ರವಿವರ್ಮ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಕಲಾನಿರ್ದೇಶನವಿದೆ.
 
ತಾರಾಗಣದಲ್ಲಿ ಯಾರ್ಯಾರು ಇದ್ದಾರೆ? ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಭಾವನ(ಜಾಕಿ), ರಂಗಾಯಣರಘು, ರವಿಶಂಕರ್, ಮೈತ್ರೇಯ, ರಾಕ್‍ಲೈನ್ ಸುಧಾಕರ್, ರಾಜುತಾಳಿಕೋಟೆ, ಬಿರಾದಾರ್ ಮುಂತಾದವರಿದ್ದಾರೆ.
 
ಸ್ವಿಸ್ ಬ್ಯಾಂಕ್ ನಲ್ಲಿ ಚಿತ್ರೀಕರಿಸಿರುವ  ಟೋಪಿವಾಲ ಚಿತ್ರವನ್ನು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಚಿತ್ರೀಕರಿಸಲಾಗಿದ್ದು ಸ್ವಿಸ್ ಬ್ಯಾಂಕ್ ನಲ್ಲೂ ಚಿತ್ರೀಕರಿಸಲಾಗಿದೆ. ಅಲ್ಲಿಗೆ ಕಥೆ ಏನಿರಬಹುದು ಎಂಬುದು ನಿಮ್ಮ ಊಹೆಗೇ ಬಿಟ್ಟಿದ್ದು. ಇನ್ನು ಮಧ್ಯಂತರದ ವೇಳೆಗೆ ಚಿತ್ರ ಮಹತ್ತರ ತಿರುವು ಪಡೆಯಲಿದ್ದು ಪ್ರೇಕ್ಷಕರು ಜಡ್ಜ್ ಮಾಡುವುದೇ ಕಷ್ಟವಾಗುತ್ತದೆ ಎನ್ನುತ್ತಾರೆ ಉಪ್ಪಿ.
 
ವೇಗವಾಗಿ ಸಾಗಿಹೋಗುವ ಕಥೆ 'ಎ' ಹಾಗೂ ಉಪೇಂದ್ರ ಚಿತ್ರಗಳಂತೆಯೇ ಟೋಪಿವಾಲ ಕಥೆಯೂ ವೇಗವಾಗಿ ಸಾಗಿಹೋಗುತ್ತದೆ. ಮೊದಲರ್ಧ ಸೂಪರ್ ಸ್ಪೀಡ್, ಇಂಟ್ರವಲ್ ಇಷ್ಟು ಬೇಗ ಬರುತ್ತದೆ ಅಂಥ ಯಾರೂ ಊಹಿಸಿರಲ್ಲ. ಚಿತ್ರದಲ್ಲಿನ ಕೆಲವೊಂದು ಸಣ್ಣ ಸಣ್ಣ ಸನ್ನಿವೇಶಗಳು ದೇಶದ ಗಂಭೀರ ಸಮಸ್ಯೆಗಳನ್ನು ಬಿಂಬಿಸುತ್ತವೆ ಎನ್ನುತ್ತಾರೆ ಉಪೇಂದ್ರ.
 
ಚಿತ್ರ ವಿಮರ್ಶೆಗಾಗಿ ನಿರೀಕ್ಷಿಸಿ ಚಿತ್ರ ಒಮ್ಮೆ ನೋಡಿದವರು ಮತ್ತೊಮ್ಮೆ ನೋಡುವಂತಿದೆ. ಎರಡು ಗಂಟೆ ಇಪ್ಪತ್ತೈದು ನಿಮಿಷಗಳ ಕಾಲಾವಧಿಯ ಚಿತ್ರ ನಿಮ್ಮನ್ನು ಸೀಟಿಗೆ ಅಂಟಿ ಕೂರುವಂತೆ ಮಾಡುತ್ತದೆ ಎಂದಿದ್ದಾರೆ ನಿರ್ದೇಶಕ ಶ್ರೀನಿ. ಚಿತ್ರದ ವಿಮರ್ಶೆಗಾಗಿ ನಿಮ್ಮ ನೆಚ್ಚಿನ ತಾಣ ಒನ್ಇಂಡಿಯಾ ಕನ್ನಡದಲ್ಲಿ ನಿರೀಕ್ಷಿಸಿ.
 

No comments:

Post a Comment