Wednesday, July 25, 2012

ಗಾಡ್ ಫಾದರ್ ಮೇಲೆ ಕೆ ಮಂಜುಗೆ ಭಾರಿ ಭರವಸೆ

ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಗಾಡ್‌‌ಫಾದರ್' ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು (ಜುಲೈ 27, 2012) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ ಮಂಜು ನಿರ್ಮಾಣದ ಈ ಚಿತ್ರ ಕರ್ನಾಟಕದಲ್ಲಿ ಬರೋಬ್ಬರಿ 120 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಅಜಿತ್ ನಟನೆಯ ತಮಿಳಿನ 'ವರಲಾರು' ರೀಮೇಕ್ ಗಾಡ್ ಫಾದರ್ ಚಿತ್ರದ ಮೇಲೆ ನಿರ್ಮಾಪಕ ಕೆ ಮಂಜುಗೆ ಇನ್ನಿಲ್ಲದ ಭರವಸೆ.

ಗಾಡ್ ಫಾದರ್ ಚಿತ್ರದಲ್ಲಿ ಉಪೇಂದ್ರ ಮೂರು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಪ್ಪ, ಇಬ್ಬರು ಮಕ್ಕಳ ತ್ರಿಪಾತ್ರಗಳಲ್ಲಿ ನಟಿಸಿರುವ ಉಪ್ಪಿ ಮೂಲ ಚಿತ್ರದಲ್ಲಿ ನಟಿಸಿರುವ ಅಜಿತ್ ನಟನೆಯನ್ನು ಎಲ್ಲಿಯೂ ಅನುಕರಿಸಿಲ್ಲವಂತೆ. ಅಷ್ಟೇ ಅಲ್ಲ, "ಅಜಿತ್ ನಟನೆಗೆ ಸರಿಸಮಾನವಾಗಿ ನಟಿಸಬೇಕೆಂದು ನಾನು ಸ್ಪರ್ಧಿಸಲ್ಲ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪಾತ್ರಗಳಿಗೆ ನ್ಯಾಯ ಒದಗಿಸಿದ್ದೇನೆ" ಎಂದಿದ್ದಾರೆ ಉಪೇಂದ್ರ.

ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಒಂದಕ್ಕಿಂತ ಹೆಚ್ಚು ಪಾತ್ರಗಳು ಹೊಸದೇನಲ್ಲ. ಈ ಮೊದಲು 'ಆರಕ್ಷಕ' ಚಿತ್ರದಲ್ಲಿ ಉಪ್ಪಿ ದ್ವಿಪಾತ್ರದಲ್ಲಿ ನಟಿಸಿದ್ದರು. ಈಗ ತ್ರಿಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಮೂರು ಪಾತ್ರಗಳು ಅತಿಂಥವಲ್ಲ. ಪರಮ ಕ್ರೂರಿಗಳಾಗಿರುವ ಪಾತ್ರಗಳವು. ಅಂತಹ ಪಾತ್ರಗಳಲ್ಲಿ ಇದುವರೆಗೆ ಉಪ್ಪಿ ನಟಿಸಿಯೇ ಇಲ್ಲ.

ಕೆ ಮಂಜು ಈ ಚಿತ್ರದ ರೀಮೇಕ್ ಹಕ್ಕು ಖರೀದಿಸಿ ಸಾಕಷ್ಟು ನಟರ ಬಳಿ ಕೇಳಿದ್ದಾರೆ. ಆದರೆ ಯಾರೂ ಈ ಚಿತ್ರದಲ್ಲಿ ನಟಿಸುವ ಧೈರ್ಯವನ್ನು ಮಾಡಿರಲಿಲ್ಲವಂತೆ. ಪಕ್ಕಾ ಥ್ರಿಲ್ಲರ್ ಚಿತ್ರವಾಗಿರುವ ಇದರಲ್ಲಿರುವ ಮೂರು ಪಾತ್ರಗಳಲ್ಲಿ ನಟಿಸುವುದು ಸಾಮಾನ್ಯ ಕೆಲಸವೇನಲ್ಲ. ಅದೂ ರೀಮೇಕ್ ಆಗಿರುವ ಮೂಲ ಚಿತ್ರದೊಂದಿಗೆ ಹೋಲಿಕೆ ಸಾಮಾನ್ಯ.ಆದರೆ ಇದನ್ನೇ ಚಾಲೆಂಜ್ ಆಗಿ ಸ್ವೀಕರಿಸಿ ನಟಿಸಿದ್ದಾರೆ ಉಪೇಂದ್ರ. ಈ ಚಿತ್ರದಲ್ಲಿ ನಾಯಕಿಯಾಗಿ ಜಯಮಾಲಾ ಪುತ್ರಿ ಸೌಂದರ್ಯಾ ನಟಿಸಿದ್ದಾರೆ. ಸದಾ, ಭೂಮಿಕಾ ಚಾವ್ಲಾ, ಕ್ಯಾಥರಿನ್ ಥ್ರೆಸಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಾಡ್ ಫಾದರ್ ನಿರ್ದೇಶಕರು ತಮಿಳಿನ ಖ್ಯಾತ ಛಾಯಾಗ್ರಾಹಕ ಪಿ ಸಿ ಶ್ರೀರಾಮ್. ಇನ್ನೇನು ಬಿಡುಗಡೆ ಸಮೀಪಿಸಿದೆ, ಯಶಸ್ಸನ್ನು ಕಾದು ನೋಡಬೇಕು.

No comments:

Post a Comment