Saturday, May 26, 2012

ರಿಯಲ್ ಸ್ಟಾರ್ ಉಪೇಂದ್ರಗೆ ಪ್ರೇತಬಾಧೆಯಂತೆ!

ರಿಯಲ್ ಸ್ಟಾರ್ ಉಪೇಂದ್ರಗೆ ಪ್ರೇತಬಾಧೆ! ಆದರೆ ಸಿನಿಮಾದಲ್ಲಿ ಮಾತ್ರ. ತಮಿಳಿನ ಸೂಪರ್ ಹಿಟ್ 'ಕಾಂಚನಾ' ಕಾಪಿ 'ಕಲ್ಪನಾ'ದಲ್ಲಿ ಪ್ರೇತಬಾಧೆಗೊಳಗಾದ ಯುವಕನ ಪಾತ್ರವನ್ನು ಉಪ್ಪಿ ಮಾಡುತ್ತಿದ್ದಾರೆ. ಇಲ್ಲಿ ಉಪ್ಪಿಯ ದೇಹವನ್ನು ಮೂರು ಪ್ರೇತಗಳು ಪ್ರವೇಶಿಸುತ್ತವೆಯಂತೆ!

ಉಪ್ಪಿ ಇಂತಹ ಪಾತ್ರವನ್ನು ಈ ಹಿಂದೆ ಯಾವ ಚಿತ್ರದಲ್ಲೂ ಮಾಡಿಲ್ಲ. ತುಂಬಾ ಸವಾಲಿನ ಪಾತ್ರ. ಒಂದೇ ದೃಶ್ಯದಲ್ಲಿ ನಾಲ್ಕು ಪಾತ್ರಗಳಾಗಿ ನಟಿಸಬೇಕಿತ್ತು. ಅದನ್ನು ಉಪ್ಪಿ ಚೆನ್ನಾಗಿಯೇ ನಿಭಾಯಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ರಾಮ್ ನಾರಾಯಣ್ ನಿರ್ದೇಶನ-ನಿರ್ಮಾಣದ 'ಕಲ್ಪನಾ' ಚಿತ್ರದಲ್ಲಿ ಉಪ್ಪಿಗೆ ಲಕ್ಷ್ಮಿ ರೈ ನಾಯಕಿ.

ಹಾಸ್ಯ ಹಾಗೂ ಭಯಾನಕ ಚಿತ್ರಿಕೆಯಿರುವ 'ಕಲ್ಪನಾ'ದಲ್ಲಿ ಹಿಜಡಾ ಪಾತ್ರ ಮಹತ್ವದ್ದು. ಚಿತ್ರದ ಶೀರ್ಷಿಕೆಯಿರುವುದೇ ಹಿಜಡಾ ಪಾತ್ರದ ಮೇಲೆ. ತಮಿಳಿನಲ್ಲಿ ಶರತ್ ಕುಮಾರ್ ಪೋಷಿಸಿದ್ದ ಈ ಪಾತ್ರವನ್ನು ಕನ್ನಡದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಮಾಡಿದ್ದಾರೆ. ಉಳಿದ ಪ್ರಮುಖ ಪಾತ್ರಗಳಲ್ಲಿ ಶ್ರುತಿ ಮತ್ತು ಉಮಾಶ್ರೀ ನಟಿಸಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಾಯಕನನ್ನು ಪರಿಚಯಿಸುವ ಹಾಡೊಂದರ ಚಿತ್ರೀಕರಣ ನಡೆಯಿತು. ಇನ್ನು ಸ್ವಲ್ಪ ದಿನ ಶೂಟಿಂಗ್ ಮಾಡುವುದರೊಂದಿಗೆ, ಕಲ್ಪನಾ ಚಿತ್ರೀಕರಣ ಪೂರ್ತಿಯಾಗಿ ಮುಗಿಯಲಿದೆ.

ರಾಮ್ ನಾರಾಯಣ್ ಅವರಿಗೆ ನಿರ್ದೇಶಕರಾಗಿ ಇದು 125ನೇ ಚಿತ್ರ. ಕನ್ನಡದ್ದೇ ಲೆಕ್ಕಾ ಹಾಕಿದರೆ ಇದು 10ನೇಯದ್ದು. ಗೆಲ್ಲುವ ಭರವಸೆಯೊಂದಿಗೆ ಅವರು ಸ್ವತಃ ನಿರ್ಮಾಣಕ್ಕೂ ಇಳಿದಿದ್ದಾರೆ. ತಮಿಳಿನಲ್ಲಿ ರಾಘವ ಲಾರೆನ್ಸ್ ಖರ್ಚು ಮಾಡಿರುವುದಕ್ಕಿಂತಲೂ ಹೆಚ್ಚು ಖರ್ಚು ಮಾಡಿದ್ದೇವೆ, ಅದಕ್ಕಿಂತಲೂ ಅದ್ಧೂರಿಯಾಗಿ ಮೂಡಿ ಬಂದಿದೆ ಎಂದವರು ವಿಶ್ವಾಸದಿಂದಲೇ ಹೇಳಿದ್ದಾರೆ.

'ಕಲ್ಪನಾ' ಮುಗಿಯುತ್ತಿದ್ದಂತೆ ಉಪೇಂದ್ರ 'ಟೋಪಿವಾಲಾ'ದತ್ತ ಗಮನ ಕೊಡಲಿದ್ದಾರೆ. ರೇಡಿಯೋ ಜಾಕಿ ಶ್ರೀನಿವಾಸ್ ನಿರ್ದೇಶನದ 'ಟೋಪಿವಾಲಾ' ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಈಗ ಎರಡನೇ ಹಂತ. ಜೂನ್ 20ರಿಂದ ಚಿತ್ರೀಕರಣ ಮತ್ತೆ ಶುರು.

No comments:

Post a Comment