Friday, April 20, 2012

ಕೆ ಮಂಜು, ಉಪೇಂದ್ರ ಸಂಧಾನ ಬಹಿಷ್ಕರಿಸಿದ್ದು ಯಾಕೆ?

ಗಾಡ್ ಫಾದರ್ ಚಿತ್ರದ ನಿರ್ಮಾಪಕ ಕೆ ಮಂಜು ಉಪೇಂದ್ರರ ಮಾತನ್ನು ಧಿಕ್ಕರಿಸಿ ಸಂಧಾನ ಸಭೆಯನ್ನೇ ಬಹಿಷ್ಕರಿಸಿ ಹೊರನಡೆದ ಘಟನೆ ಎಲ್ಲರಿಗೂ ಗೊತ್ತಿದೆ. ಆದರೆ ಹಾಗೆ ಹೋಗಿದ್ದಕ್ಕೆ ಕಾರಣವೇನು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಸಂಧಾನದ ಸಂದರ್ಭದಲ್ಲಿ ಉಪೇಂದ್ರ, ಗಾಡ್ ಫಾದರ್ ಚಿತ್ರವನ್ನು ಕಠಾರಿವೀರ ನಂತರ ಬಿಡುಗಡೆ ಮಾಡಿ ಎಂದು ಮಂಜುರಿಗೆ ಸಲಹೆ ನೀಡಿದ್ದರಂತೆ. ಅದಕ್ಕೆ ಕೆಂಡಮಂಡಲವಾಗಿ ಮಂಜು ಹೊರನಡೆದರಂತೆ.

ಅದೇ ರೀತಿ ಮುನಿರತ್ನರ ಮನವೊಲಿಸಲೂ ಕೂಡ ಉಪೇಂದ್ರ ಪ್ರಯತ್ನಿಸಿದ್ದಾರೆ. ಆದರೆ ಮುನಿರತ್ನ ಪಟ್ಟೂ ಸಡಿಲಿಸಲಿಲ್ಲ, ಉಪ್ಪಿ ಮಾತನ್ನೂ ಕೇಳಲಿಲ್ಲ. ಆದರೆ ಮಂಜು ಮಾತ್ರ ಉಪೇಂದ್ರ ಮಾತಿಗೆ ವಾಗ್ವಾದ ನಡೆಸಿ ಸಭೆಯನ್ನೇ ಬಹಿಷ್ಕರಿಸಿ ಹೊರನಡೆದದ್ದು ಅಲ್ಲಿದ್ದ ಎಲ್ಲರಿಗೂ ಮುಜುಗರವ ಉಂಟುಮಾಡಿದೆ. ಕಾರಣ, ಸಂಧಾನಕ್ಕಾಗಿ ಮಂಜು ಹಾಗೂ ಮನಿರತ್ನ ಅವರುಗಳೇ ವಿದೇಶದಲ್ಲಿ ಚಿತ್ರೀಕರಣದಲ್ಲಿದ್ದ ಉಪೇಂದ್ರರನ್ನು ಮನೆಗೆ ಕರೆಸಿಕೊಂಡಿದ್ದು.

ಇದೀಗ ಉಪೇಂದ್ರ ಮನೆಯಲ್ಲಿ ನಡೆದ ಸಂಧಾನ ವಿಫಲವಾದ ನಂತರ ನಿರ್ಮಾಪಕರಿಬ್ಬರೂ ಅಂಬರೀಷ್ ಮನೆ ಕಡೆ ಹೋಗುವ ನಿರ್ಧಾರ ಮಾಡಿದ್ದಾರೆ. ಆದರೆ ಸಂಧಾನ ನಡೆಸಲು ಅಂಬಿ ಒಪ್ಪುತ್ತಾರೋ, ಸಮಸ್ಯೆ ಬಗೆ ಹರಿಯುತ್ತೋ ಎನ್ನುವುದು ಸದ್ಯಕ್ಕೆ ಯಕ್ಷ ಪ್ರಶ್ನೆಯೇ! ಒಟ್ಟಿನಲ್ಲಿ ಉಪೇಂದ್ರರ ಮಾತನ್ನು ಧಿಕ್ಕರಿಸುವಷ್ಟು ಧೈರ್ಯ ಮಂಜುಗೆ ಬಂದಿದ್ದು ಎಲ್ಲಿಂದ ಎಂದಿ ಇಡೀ ಗಾಂದಿನಗರ ಮಾತನಾಡುತ್ತಿದೆ.

No comments:

Post a Comment