Friday, March 16, 2012

ಉಪ್ಪಿ ಕಠಾರಿ ವೀರ, ರಮ್ಯಾ ಸುರ ಸುಂದರಿ!

ಲಕ್ಕಿ ಸ್ಟಾರ್ ರಮ್ಯಾ ಏನೋ ಸುರ ಸುಂದರಿ ಎಂಬುದನ್ನು ತಕರಾರಿಲ್ಲದೆ ಒಪ್ಪಿಕೊಳ್ಳಬಹುದು. ಆದರೆ ಉಪ್ಪಿ ಕಠಾರಿ ವೀರನೆಂದರೆ ಅರ್ಥವಾಗೋದು ಕೊಂಚ ಕಷ್ಟವೇ. ನಿಜ ವಿಷಯಕ್ಕೆ ಬಂದು ಬಿಡಿ. ಇದು ಈ ಹಿಂದೆ 'ಯಮೇಂದ್ರ ಉಪೇಂದ್ರ' ಎಂದು ಹೆಸರಿಡಲಾಗಿದ್ದ ಚಿತ್ರಕ್ಕೆ ಮಾಡಲಾಗಿರುವ ರೀನೇಮ್! ಹೆಸರೇ 'ಕಠಾರಿ ವೀರ ಸುರ ಸುಂದರಾಂಗಿ'.

ಸಿನಿಮಾಗಳಿಗೆ ಇಂತಹ ಹೆಸರುಗಳನ್ನೂ ಇಡಬಹುದೇ ಅಂತೇನೂ ತಲೆ ಚಚ್ಚಿಕೊಳ್ಳಬೇಕಾದ ಅಗತ್ಯವಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ಇದ್ದಲ್ಲಿ ಎಂತಹ ಹೆಸರುಗಳು ಬೇಕಾದರೂ ಹುಟ್ಟಿಕೊಳ್ಳುತ್ತವೆ. ಅಂತಹ ಹೆಸರುಗಳಿಗೆ ಅವರು ನ್ಯಾಯವನ್ನೂ ಸಲ್ಲಿಸುತ್ತಾರೆ. ಈ ಹಿಂದೆ ಎ, ಶ್, ಓಂ, ಉಪೇಂದ್ರ, ಎಚ್‌ಟುಒ, ರಕ್ತಕಣ್ಣೀರು, ಬುದ್ಧಿವಂತ, ಸೂಪರ್ ಮುಂತಾದ ವಿಚಿತ್ರವೆನಿಸುವ ಹೆಸರುಗಳಿಗೆ ಅವರು ಮೋಸ ಮಾಡಿದ್ದುಂಟೇ?

ಹೀಗೆ ಹೇಳಲು ಕಾರಣ, 'ಕಠಾರಿ ವೀರ ಸುರ ಸುಂದರಾಂಗಿ' ಚಿತ್ರಕ್ಕೆ ಸ್ವತಃ ಉಪ್ಪಿಯೇ ಕಥೆ ಬರೆದಿರುವುದು. ಹೌದು, ಸೂಪರ್ ನಂತರ ಅವರು ನಟಿಸಿರುವ ಆರಕ್ಷಕ ಮತ್ತು ಗಾಡ್‌ಫಾದರ್‌ಗಳಲ್ಲಿ ಕೈಯಾಡಿಸಿದ್ದಿಲ್ಲ. ಕಥೆ ಬರೆದದ್ದು ಸೂಪರ್‌ಗೇ ಕೊನೆ. ಹೇಳಿ ಕೇಳಿ ಈಗ ಉಪ್ಪಿಯದ್ದು ಹಾಸ್ಯ ಕಥೆಯುಳ್ಳ ಚಿತ್ರ. ಈ ಟ್ರ್ಯಾಕ್‌ನಲ್ಲಿ ಉಪ್ಪಿ ಇದ್ದದ್ದು, ಮೊದಲ ಚಿತ್ರದಲ್ಲಿ. ಅದು ಜಗ್ಗೇಶ್ ನಾಯಕರಾಗಿದ್ದ ತರ್ಲೆ ನನ್ಮಗ. ನಂತರ 'ಗೌರಮ್ಮ'ದಲ್ಲಿ ನಟಿಸಿದ್ದು ಬಿಟ್ಟರೆ, ಉಪ್ಪಿಗೂ ಹಾಸ್ಯಕ್ಕೂ ನಂಟು ಬೆಳೆದಿರಲಿಲ್ಲ.

'ಕಠಾರಿ ವೀರ ಸುರ ಸುಂದರಾಂಗಿ' ಚಿತ್ರವನ್ನು ನಿರ್ದೇಶಿಸುತ್ತಿರುವುದು 'ಕದಂಬ' ಮತ್ತು 'ಜೇಷ್ಠ' ಖ್ಯಾತಿಯ ಸುರೇಶ್ ಕೃಷ್ಣ. ನಿರ್ಮಿಸುತ್ತಿರುವುದು ಮುನಿರತ್ನ ನಾಯ್ಡು.

ರೆಬೆಲ್ ಸ್ಟಾರ್ ಅಂಬರೀಷ್ ಯಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಇಲ್ಲಿ ದೊಡ್ಡಣ್ಣ ಚಿತ್ರಗುಪ್ತ. ಉಪ್ಪಿ ಭೂಲೋಕದ ಅಪರಾ ತಪರಾಗಳಿಂದ ರೋಸಿ ಹೋದ ಬಾಯಿ ಬಡುಕ. ಆತನ ಪ್ರೇಯಸಿಯಾಗಿ ರಮ್ಯಾ ಸಾಥ್ ನೀಡುತ್ತಿದ್ದಾರೆ.

ಸ್ವತಃ ಉಪ್ಪಿಯೇ ಕಥೆ ಬರೆದಿದ್ದಾರೆ ಎಂದ ಮೇಲೆ ಅವರ ಅಭಿಮಾನಿಗಳಿಗಂತೂ ಖಂಡಿತಾ ನಿರಾಸೆಯಾಗೋದಿಲ್ಲ.

No comments:

Post a Comment