Monday, September 26, 2011

ಕುಡಿಯೋದು ಕಾವೇರಿ ನೀರು, ಆಡೋದು ಮಾತ್ರ...!

ಕನ್ನಡದ ನೆಲದಲ್ಲಿ ಕನ್ನಡಕ್ಕೆ ಅವಮಾನವಾಗುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ದೊಡ್ಡ ಮಟ್ಟಿಗೆ ಸುದ್ದಿಯಾದರೆ ಕೆಲವೊಂದು ನೀರಲ್ಲಿ ನೆಂದ ಪಟಾಕಿಯಂತೆ ಸಿಡಿಯೋದೆ ಇಲ್ಲ. ಸ್ವಾಭಿಮಾನಿ ಕನ್ನಡಿಗರ 'ಸ್ವಾಭಿಮಾನಕ್ಕೆ' ಅವಮಾನ ಆಗುವ ಪ್ರಸಂಗಗಳು ನಡೆಯುತ್ತಲೇ ಇರುತ್ತದೆ. ಆದರೂ ಸುಸಂಸ್ಕೃತರೂ, ವಿಶಾಲ ಹೃದಯದ ಕನ್ನಡಿಗರು ಅವನ್ನೆಲ್ಲಾ ನೋಡಿದರೂ ನೋಡದೆ, 'ನಮಗ್ಯಾಕೆ ಇದೆಲ್ಲಾ' ಎಂದು ಸುಮ್ಮನಿರುವುದು ಮಾತ್ರ ವಾಸ್ತವತೆ. ನಮ್ಮವರಿಂದಲೇ ಕನ್ನಡಕ್ಕೆ ಅವಮಾನದ ಘಟನೆ ಕೂಡಾ ನಡೆಯುತ್ತವೆ. ಕೆಲವೊಂದು ಉದಾಹರಣೆ ಓದುಗರ ಗಮನಕ್ಕೆ, ಈ ಘಟನೆಗಳು ಈ ತಿಂಗಳಲ್ಲೇ ನಡೆದಿದ್ದು.

ಉದಾಹರಣೆ 1 : ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪುಟ್ಟದಾಗಿ ಒಂದು ಸಾಫ್ಟ್ ವೇರ್ ಸಂಸ್ಥೆ ಹುಟ್ಟು ಹಾಕಿ ಇಂದು ಜಾಗತಿಕವಾಗಿ ಪ್ರಾಬಲ್ಯ ಮೆರೆಯುತ್ತಿರುವ ಸಂಸ್ಥೆಯ ಸಂಸ್ಥಾಪಕರು ಪಂಚತಾರ ಹೋಟೆಲ್ ನಲ್ಲಿ ಕನ್ನಡ ಏನಿದ್ರೂ ಮನೇಲಿ, ಹೊರಗಡೆ ಕನ್ನಡ ಇಲ್ಲಪ್ಪಾ ಎನ್ನುತ್ತಾರೆ. ಇದನ್ನು ಕೇಳಿ ಪಕ್ಕದಲ್ಲಿದ್ದವರು ಗುಳ್ಳನೆ ನಗುತ್ತಾರೆ. ಇವರು ಮೈಸೂರು ಮೂಲದ ಕನ್ನಡಿಗರು.

ಉದಾಹರಣೆ 2 : ಕನ್ನಡದ ಉದ್ಯಮಿಯೊಬ್ಬರು ಇನ್ನೂ ಉದ್ಘಾಟನೆಗೊಳ್ಳಬೇಕಾಗಿರುವ ತನ್ನ ಸಂಸ್ಥೆಯ ಗ್ಲಾಸ್ ಸಂಬಂಧಿ ಕೆಲಸಕ್ಕಾಗಿ ಬಿಹಾರ್ ಮೂಲದ ಕಂಟ್ರಾಕ್ಟರ್ ಒಬ್ಬನಿಗೆ ಲಕ್ಷ ಲಕ್ಷ ಮುಂಗಡ ನೀಡಿ ಕೆಲಸ ಒಪ್ಪಿಸುತ್ತಾನೆ. ಸಾವಿರ ರೂಪಾಯಿಯ ಕೆಲಸ ಮಾಡದ ಈತ ಕೆಲಸ ಮುಗಿಸದೆ ಓಡಾಡುತ್ತಿರುತ್ತಾನೆ. ಕೆಲಸ ಮುಗಿಸೆಂದು ಉದ್ಯಮಿ ಒತ್ತಡ ಹೇರಿದರೆ ರೌಡಿಗಳನ್ನು ಬಿಟ್ಟುಹೊಡೆಸುತ್ತೇನೆ ಎಂದು ಧಮ್ಕಿ ಹಾಕುತ್ತಾನೆ.

ಉದಾಹರಣೆ 3 : ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಸಂಬಂಧ ಮಾಧುರ್ಯ ಮೆಲೋಡಿಯಸ್ ನವರು ರಸಸಂಜೆ ಕಾರ್ಯಕ್ರಮ ನಡೆಸಿ ಕೊಡುತ್ತಾರೆ. ದಿ.ವಿಷ್ಣು ಅವರ ಸೂರ್ಯವಂಶ ಚಿತ್ರದ 'ಸೇವಂತಿಯೇ.. ಸೇವಂತಿಯೇ' ಹಾಡುತ್ತಿರಬೇಕಾದರೆ ಕುಡಿದ ಅಮಲಿನಲ್ಲಿದ್ದ ವ್ಯಕ್ತಿ "ರಜನಿ ಪಾಡ್ ಪಾಡಿಯಾ" ಎಂದು ಕೂಗುತ್ತಾನೆ. ಅಲ್ಲಾಪ್ಪಾ. ನೀನು ಕರ್ನಾಟಕದಲ್ಲಿ ಇದ್ದೀಯಾ .. ತಮಿಳುನಾಡಿನಲ್ಲಿ ಇದ್ದೀಯ ಎಂದು ನಾನು ಆತನನ್ನು ಕೇಳಿದ್ರೆ, ಸುಮ್ನಿರು ಗುರು ಎಂದು ನಮ್ಮ ಬಾಯನ್ನೇ ಕಾರ್ಯಕ್ರಮದ ಪ್ರಾಯೋಜಕರು ಮುಚ್ಚಿಸುತ್ತಾರೆ. ಆ ಹಾಡಿನ ನಂತರ ರಜನಿ ಶಿವಾಜಿ ಚಿತ್ರದ ಹಾಡನ್ನು ಹಾಡುತ್ತಾರೆ.

No comments:

Post a Comment